ಆಳ್ವಾಸ್ ನುಡಿಸಿರಿ - 2012 ರಾಷ್ಟ್ರೀಯ ಪ್ರಶಸ್ತಿ ಪ್ರಕಟ

ಕುಂದಾಪ್ರ ಡಾಟ್ ಕಾಂ, ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2012"ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಗಣ್ಯರನ್ನು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಆಳ್ವ ಈ ವಿವರ ನೀಡಿದರು.
     ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ನೀಡಿದ ಕೊಡುಗೆಗಾಗಿ ಅತಿ.ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜ, ಧರ್ಮಾಧ್ಯಕ್ಷರು, ಮಂಗಳೂರು, ಕನ್ನಡ ಸಾಂಸ್ಕೃತಿಕ ಸೇವೆಗಾಗಿ ಶ್ರೀ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಸಾಣೇಹಳ್ಳಿ, ಡಾ.ಸಿ.ಪಿ.ಕೃಷ್ಣ ಕುಮಾರ್ (ಸಾಹಿತ್ಯ ), ಗಿರೀಶ್ ಕಾಸರವಳ್ಳಿ (ಚಲನಚಿತ್ರ), ಡಾ.ಜಿ.ಸಿದ್ದಲಿಂಗಯ್ಯ (ಸಾಹಿತ್ಯ), ವೈಜಯಂತಿ ಕಾಶಿ( ನೃತ್ಯ ಮತ್ತು ಕಿರುತೆರೆ), ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ (ಯಕ್ಷಗಾನ) ಡಾ.ವಿಷ್ಣುನಾಯ್ಕ (ಸಾಹಿತ್ಯ), ಸುಭದ್ರಮ್ಮ ಮನ್ಸೂರು (ರಂಗಭೂಮಿ) ಮತ್ತು ಲೋಕ ಶಿಕ್ಷಣ ಟ್ರಸ್ಟ್ (ಪ್ರಕಾಶನ) ಇವರನ್ನು 2012ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ  ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರುಪಾಯಿ ಹತ್ತುಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ,  ಗೌರವ ಸನ್ಮಾನವನ್ನು ಒಳಗೊಂಡಿರುತ್ತದೆ.
      ನವೆಂಬರ್ 18 ರವಿವಾರ ಇಳಿಹಗಲು 3.30ರಿಂದ ನಡೆಯಲಿರುವ ಒಂಭತ್ತನೇ ವರುಷದ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯರ ಮೆರವಣಿಗೆ ಬಳಿಕ ನುಡಿಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮಾರೋಪ ಭಾಷಣ ಮಾಡಲಿದ್ದು, ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ.


      ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾ ರ್ಣಿಕ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಘಾಟನಾ ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷರನ್ನೊಳಗೊಂಡಂತೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
       ಶತಾಯುಷಿ, ವಿದ್ವಾಂಸ ಪ್ರೊ.ಜಿ.ವೆಂಕಟ ಸುಬ್ಬಯ್ಯ  ಅವರಿಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಪೂರ್ವಾಹ್ನ 12 ರಿಂದ ನಡೆಯಲಿದೆ. ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು  ಶತಾಯುಷಿಗೆ ಗೌರವ ಸಮರ್ಪಿಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ.
ಕನ್ನಡ ಸಾಹಿತ್ಯಕ ಚಳವಳಿಗಳು, ಸಾಮುದಾಯಿಕ ಚಳವಳಿಗಳು, ಅಖಂಡ ಕರ್ನಾಟಕ  ಅಸ್ತಿತ್ವ – ಹೋರಾಟ, ಕಲೆ – ಮಾಧ್ಯಮ ಚಳವಳಿಗಳು ಎಂಬ ಪ್ರಮುಖ ನಾಲ್ಕು ಗೋಷ್ಠಿಗಳನ್ನು ಈ ಬಾರಿಯ ನುಡಿಸಿರಿಯಲ್ಲಿ ಆಯೋಜಿಸಲಾಗಿದೆ. ಇದಲ್ಲದೇ ಕಥಾ ಸಮಯ, ಕವಿಸಮಯ- ಕವಿನಮನ, ವಿಶೇಷೋಪನ್ಯಾಸ, ಮಾತಿನ ಮಂಟಪ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com