ಪ್ರೊ.ಜಿ.ವಿ.ಗೆ ಸ್ವಾಗತ ನುಡಿಸಿರಿ ಸಮಿತಿಯಿಂದ ಆಮಂತ್ರಣ


       ಕುಂದಾಪ್ರ ಡಾಟ್ ಕಾಂ: ಆಳ್ವಾಸ್ ನುಡಿಸಿರಿ - 2012ರ ರಾಷ್ಟ್ರೀಯ ಸಮ್ಮೇಳನದ ವಿಶೇಷ ಗೌರವಕ್ಕೆ ಪಾತ್ರರಾಗಿರುವ ಶತಾಯುಷಿ ವಿದ್ವಾಂಸ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿಯ ವತಿಯಿಂದ ಅಧಿಕೃತ ಆಮಂತ್ರಣವನ್ನು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ನೀಡಿ ಸ್ವಾಗತಿಸಲಾಯಿತು.
     ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಲಿರುವ ಒಂಭತ್ತನೇ  ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2012 " ಇದೇ ನವೆಂಬರ್ 16,17 ಮತ್ತು 18ರಂದು ಮೂಡಬಿದಿರೆ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
ಆಳ್ವಾಸ್ ನುಡಿಸಿರಿ 2012ರ ಸ್ವಾಗತ ಸಮಿತಿ ಕಾರ್ಯದರ್ಶಿ, ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ನುಡಿಸಿರಿ ಸ್ವಾಗತ ಸಮಿತಿ ಕಾರ್ಯದರ್ಶಿ,ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ, ಉಪನ್ಯಾಸಕ ಅನು ಬೆಳ್ಳೆಯನ್ನೊಳಗೊಂಡ ನಿಯೋಗ ಶತಾಯುಷಿಗಳಿಗೆ ಆಹ್ವಾನ ನೀಡಿದರು.
     ಆಳ್ವಾಸ್ ನುಡಿಸಿರಿ ಒಂದು ವಿಭಿನ್ನ ಸಮ್ಮೇಳನ. ಅಷ್ಟೇ ಅಚ್ಚುಕಟ್ಟು, ಸಮಯ ಪ್ರಜ್ಞೆಯನ್ನೊಳಗೊಂಡ ಸಮ್ಮೇಳನ. ಅದಕ್ಕೊಂದು ಶಿಸ್ತು ಇದೆ. ಪಾರದರ್ಶಕತೆಯ ಮೂಲಕ ಸಮ್ಮೇಳನ ನಡೆಸುವ ರೀತಿ ಎಲ್ಲರಿಗೂ ಮಾದರಿ ಎಂದು ಗೌರವ ಆಮಂತ್ರಣ ಸ್ವೀಕರಿಸಿದ ವೆಂಕಟಸುಬ್ಬಯ್ಯ ಪ್ರತಿಕ್ರಿಯಿಸಿದರು.
     ಶತಾಯುಷಿ, ವಿದ್ವಾಂಸ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರಿಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಪೂರ್ವಾಹ್ನ 12 ರಿಂದ ನಡೆಯಲಿದೆ. ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಶತಾಯುಷಿಗೆ ಗೌರವ ಸಮರ್ಪಿ ಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ. ನವೆಂಬರ್ 15ರಂದು ರಾತ್ರಿ ಜಿ.ವೆಂಕಟ ಸುಬ್ಬಯ್ಯ ಮೂಡಬಿದಿರೆಗೆ ತಲುಪಲಿದ್ದಾರೆ.