ನುಡಿಸಿರಿ ಸರ್ವಾಧ್ಯಕ್ಷರಿಗೆ ಆಮಂತ್ರಣ


ಕುಂದಾಪ್ರ ಡಾಟ್ ಕಾಂ, ಮೂಡುಬಿದಿರೆ: ಒಂಭತ್ತನೇ ವರುಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2012 " ಸರ್ವಾಧ್ಯಕ್ಷತೆ ವಹಿಸಲಿರುವ ನಾಡೋಜ ಡಾ.ಕೆ.ಎಸ್ ನಿಸಾರ್ ಅಹಮದ್ ಅವರಿಗೆ ಬೆಂಗಳೂರಿನ ಸ್ವ ಗೃಹದಲ್ಲಿ ನುಡಿಸಿರಿ 2012ರ ಅಧಿಕೃತ ಆಮಂತ್ರಣ ನೀಡಿ ಗೌರವಿಸಲಾಯಿತು.

       ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ, ಉಪನ್ಯಾಸಕ ಅನು ಬೆಳ್ಳೆ ಯವರನ್ನೊಳಗೊಂಡ ನಿಯೋಗ ಈ ಆಮಂತ್ರಣ ನೀಡಿ ಗೌರವಿಸಿದರು.
    ಇದೇ ನವೆಂಬರ್ 16,17 ಮತ್ತು 18ರಂದು ಮೂಡಬಿದಿರೆ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. "ಕನ್ನಡ ಮನಸ್ಸು : ಜನಪರ ಚಳವಳಿಗಳು" ಎಂಬ ಪ್ರಮುಖ ಪರಿಕಲ್ಪನೆಯಲ್ಲಿ ಈ ಬಾರಿಯ ನುಡಿಸಿರಿ ನಡೆಯಲಿದೆ. ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅತಿಥಿಗಳಾಗಿ ಪಾಲ್ಗೊಳ್ಳುವರು.ಉದ್ಘಾಟನಾ ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷರನ್ನೊಳಗೊಂಡಂತೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. 

ಅಧ್ಯಕ್ಷರ ಭಾಷಣಕ್ಕೆ ವಿಶೇಷ ಅವಧಿ
ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆ ವಹಿಸಿರುವ ಹಿರಿಯ ಕವಿ ನಾಡೋಜ ಕೆ.ಎಸ್.ನಿಸಾರ್ ಅಹಮದ್ ಉದ್ಘಾಟನೆಯ ನಂತರ 11ಗಂಟೆಯಿಂದ ಆಶಯ ಭಾಷಣ ಮಾಡಲಿದ್ದಾರೆ. ಅಧ್ಯಕ್ಷರ ಭಾಷಣಕ್ಕೆ ವಿಶೇಷ ಅವಧಿ ನಿಗಧಿ ಪಡಿಸಿರುವುದು ಸಮ್ಮೇಳನದ ವಿಶೇಷ. ಆಳ್ವಾಸ್ ನುಡಿಸಿರಿ 2011ರ ನೆನಪಿನ ಸಂಚಿಕೆ "ಕನ್ನಡ ಮನಸ್ಸು : ಸಂಘರ್ಷ ಮತ್ತು ಸಾಮರಸ್ಯ" ಇದರ ಅನಾವರಣ ಇದೇ ಸಂದರ್ಭದಲ್ಲಿ ನಡೆಯಲಿದೆ.