ಅಂತರ್‌ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ

ಮೂಡಬಿದಿರೆ: ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ ಅಂಗವಾಗಿ ಮೂಡಬಿದಿರೆ ಸಮಾಜ ಮಂದಿರದಲ್ಲಿ ರವಿವಾರದಿಂದ ಮಂಗಳವಾರದ ವರೆಗೆ ಏರ್ಪಡಿಸಲಾಗಿದ್ದ ಅಂತರ್‌ಕಾಲೇಜು ಮಟ್ಟದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ತಂಡ ಅಗ್ರಸ್ಥಾನ ಪಡೆಯಿತು. ಸುರತ್ಕಲ್‌ ಗೋವಿಂದದಾಸ ಕಾಲೇಜು ತಂಡ ದ್ವಿತೀಯ ಹಾಗೂ ಮಂಗಳೂರು ಎಸ್‌ಡಿಎಂ ಬಿಬಿಎಂ ಕಾಲೇಜು ತಂಡ ತೃತೀಯ ಬಹುಮಾನ ಗಳಿಸಿದವು.

ಅತ್ಯುತ್ತಮ ರಾಜವೇಷ: ಸಚಿನ್‌/ಜಾಂಬವತಿ ಕಲ್ಯಾಣದ ಜಾಂಬವ - ಎಸ್‌ಡಿಎಂ ಬಿಬಿಎಂ ಕಾಲೇಜು , ಮಂಗಳೂರು, ಅತ್ಯುತ್ತಮ ಪುಂಡುವೇಷ: ಮಿಲನ್‌ ಕೆ./ಕೃಷ್ಣಾರ್ಜುನ ಕಾಳಗದ ಕೃಷ್ಣ - ಕೆನರಾ ಕಾಲೇಜು ಮಂಗಳೂರು, ಅತ್ಯುತ್ತಮ ಬಣ್ಣದ ವೇಷ: ಶೈಲೇಶ್‌/ಶ್ರೀ ರಾಮ ದರ್ಶನದ ಹನುಮಂತ - ಗೋಕರ್ಣನಾಥೇಶ್ವರ ಕಾಲೇಜು, ಅತ್ಯುತ್ತಮ ಸ್ತ್ರೀ ವೇಷ: ಶಿವಾನಿ ಶೆಟ್ಟಿ /ಶಶಿಪ್ರಭಾ ಪರಿಣಯದ ಭ್ರಮರ ಕುಂತಳೆ - ಗೋವಿಂದದಾಸ ಕಾಲೇಜು ಸುರತ್ಕಲ್‌, ಅತ್ಯುತ್ತಮ ಹಾಸ್ಯ: ಸಚಿನ್‌/ಕುಮಾರ ವಿಜಯದ ದೂತ - ಎಸ್‌ಡಿಎಂ ಉಜಿರೆ.

ಶಿಸ್ತುಬದ್ಧ ತಂಡ: ಭುವನೇಂದ್ರ ಕಾಲೇಜು ಕಾರ್ಕಳ - ಇತರೆಲ್ಲ 7 ತಂಡಗಳ ಪ್ರದರ್ಶನ ವೀಕ್ಷಿಸಿದ ಏಕೈಕ ತಂಡ, ಸೃಜನಶೀಲ ಅಭಿವ್ಯಕ್ತಿ: ಮಂಗಳೂರಿನ ಕೆನರಾ ಕಾಲೇಜು - ಕೃಷ್ಣಾರ್ಜುನ ಕಾಳಗದಲ್ಲಿ ಕೃಷ್ಣನ ಒಡ್ಡೋಲಗ.

ಭಾಗವಹಿಸಿದ ಎಲ್ಲ 8 ತಂಡಗಳಿಗೂ ಪ್ರೋತ್ಸಾಹ ಧನ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಬಹುಮಾನ ವಿತರಣೆ :
       ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನವಿತ್ತ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡಬಿದಿರೆಯ ರಮಾರಾಣಿ ಶೋಧ ಸಂಸ್ಥಾನದಲ್ಲಿ ಅನೇಕ ಅಪ್ರಕಟಿತ ಯಕ್ಷಗಾನ ಪ್ರಸಂಗಗಳಿದ್ದು, ಮೂಡಬಿದಿರೆಯಲ್ಲಿ 15ನೇ ಶತಮಾನದ ಕಾಲಕ್ಕೇ ಯಕ್ಷಗಾನ ಇತ್ತು ಎಂಬುದಕ್ಕೆ ಸಾಕ್ಷಿ ಎಂದರು.
         ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶುದ್ಧ ಕನ್ನಡ ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಮಹತ್ವದ ಪಾತ್ರ ವಹಿಸುತ್ತಿದ್ದು, ಯಕ್ಷಗಾನದಲ್ಲಿ ಯುವಜನರು ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಅದರಲ್ಲೂ ಹುಡುಗರಷ್ಟೇ ಹುಡುಗಿಯರೂ ಸಾಧನೆ ತೋರುತ್ತಿದ್ದಾರೆ ಎಂದರು.  ಮುಖ್ಯಅತಿಥಿಯಾಗಿ ಉದ್ಯಮಿ ನಾರಾಯಣ ಪಿ.ಎಂ. ಭಾಗವಹಿಸಿದ್ದರು.
ಆಳ್ವಾಸ್‌ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಸದಾಶಿವ ಶೆಟ್ಟಿಗಾರ್‌ ಬಹುಮಾನಿತರ ವಿವರ ನೀಡಿದರು.
            ತೀರ್ಪುಗಾರರಾದ ಕುಬಣೂರು ಶ್ರೀಧರ ರಾವ್‌, ತಾರಾನಾಥ ಬಲ್ಯಾಯ ವರ್ಕಾಡಿ ಮತ್ತು ವಿಷ್ಣುಶರ್ಮ ವಾಟೆಪಡು³ ಅವರನ್ನು ಅಮರನಾಥ ಶೆಟ್ಟಿ ಗೌರವಿಸಿದರು.
        ಟಿವಿ ಪ್ರಭಾವಕ್ಕೆ ಎದೆಯೊಡ್ಡಿ ನಿಂತ ಯಕ್ಷಗಾನಕ್ಕೆ ಭವಿಷ್ಯವಿದೆ ಎಂಬುದಕ್ಕೆ ಯುವಜನರು ಸಾಕ್ಷಿಯಾಗಿದ್ದಾರೆ. ಭಾಗವಹಿಸಿದ ತಂಡಗಳೆಲ್ಲವೂ ಸ್ಪರ್ಧಾತ್ಮಕ ಗುಣ ವ್ಯಕ್ತಪಡಿಸಿವೆ ಎಂದು ತೀರ್ಪುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
       ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ, ನಿರೂಪಿಸಿದರು. ಸುಮಂತ ಶೆಟ್ಟಿ ವಂದಿಸಿದರು.