ಯೋಚಿಸಿದ ಹಾಗೆ ಬದುಕಿದವರು ಕಾರಂತರು: ಡಾ. ಶುಭಾದಾಸ್ ಮರವಂತೆ

ಮೂಡುಬಿದಿರೆ(ವಿದ್ಯಾರ್ಥಿ ಸಿರಿ): ಪ್ರಾಮಾಣಿಕವಾದ ಮನಸ್ಸು ಮತ್ತು ಭಾವನೆಗಳು ನಮ್ಮ ಮತ್ತು ಇತರರ ನಡುವೆ ರೂಢಿಯಾಗಬೇಕು ಎಂದು ಹೇಳುತ್ತಿದ್ದ ಕಾರಂತರು ಪ್ರಾಮಾಣಿಕತೆಯನ್ನು ಮರೆತು ಕಾವ್ಯ ರಚಿಸಬಾರದು. ಅನುಭವಕ್ಕೆ ದಕ್ಕದ ಕಾವ್ಯ ಸಮಾಜಕ್ಕೆ ಏನನ್ನೂ ನಿಡುವುದಿಲ್ಲ ಎನ್ನುತ್ತಿದ್ದರು. ಕಾದಂಬರಿಕಾರರಾಗಿ, ನಾಟಕಕಾರರಾಗಿ, ನಿರ್ದೇಶಕನಾಗಿ, ಕವಿಯಾಗಿ, ಕಲಾವಿದರಾಗಿ, ವಿಜ್ಞಾನದ ಸಾಹಿತಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಕಾರಂತರು ತೊಡಗಿಸಿಕೊಂಡಿದ್ದರು ಎಂದು ಡಾ ಶುಭಾದಾಸ್ ಮರವಂತೆ ಹೇಳಿದರು.
    ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಪಂಜೆ ಮಂಗೇಶರಾಯ ವೇದಿಕೆಯ ವಿಚಾರಗೋಷ್ಠಿಯಲ್ಲಿ ಕಾರಂತರನ್ನು ನೆನೆದರು. ಯಾವುದೇ ಪದವಿ ವಿದ್ಯಾಭ್ಯಾಸವನ್ನು ಪಡೆಯದೇ ಕೇವಲ ಲೋಕಜ್ಞಾನದ ಮೂಲಕ ಅದ್ಬುತ ಸಾಹಿತ್ಯ ಭಂಡಾರವನ್ನು ಪ್ರಪಂಚಕ್ಕೆ ಕೊಟ್ಟು ಕನ್ನಡ ಸಾಹಿತ್ಯಕ್ಕೆ ಗಟ್ಟಿತನವನ್ನು ತಂದುಕೊಟ್ಟ ವ್ಯಕ್ತಿ. ನಿಷ್ಠುರ ವ್ಯಕ್ತಿತ್ವವನ್ನು ಹೊಂದಿದ್ದ ಕಾರಂತರೆಂದರೆ ಸ್ವಲ್ಪ ಖಾರ ಎಂದೇ ಹೇಳಲಾಗುತ್ತಿತ್ತು.
    ಯೋಚಿಸಿದ ಹಾಗೆ ಬದುಕುವುದನ್ನು ಕಾರಂತರು ನಮಗೆ ಕಲಿಸಿದರು. ಅವರು ಯಾರನ್ನು ಹಿಂಬಾಲಿಸಿದವರಲ್ಲ.  ಜಾತಿವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು.  ಯಾವ ಸ್ರ್ತೀವಾದವೂ ಗುರುತಿಸದ ಹೆಣ್ಣಿನ ಸ್ಥಾನಮಾನವನ್ನು ಕಾರಂತರು ಗುರುತಿಸಿದ್ದರು. ಕನ್ನಡ ಸಾರಸತ್ವ ಲೋಕಕ್ಕೆ ಅದ್ಬುತವಾದ ಕೃತಿಗಳನ್ನು ಕೊಟ್ಟ ಅವರು ಕುಂದಾಪ್ರ ಕನ್ನಡ  ಭಾಷೆಯ ಸೊಗಡನ್ನು ಅತ್ಯಂತ ನವಿರಾಗಿ, ನಿರ್ಭಿಡೆಯಿಂದ ಬರೆಯುವ ಶೈಲಿಯನ್ನು ರೂಡಿಸಿಕೊಂಡಿದ್ದು ಕುಂದಾಪುರದವರಿಗೆ ಹೆಮ್ಮೆಯಾಗಿದೆ ಎಂದರು.