ಮೂಡುಬಿದಿರೆ: 'ಒಂದಲ್ಲ ಒಂದು ರೀತಿಯ ಹಸಿವು ಬೇಕು. ಬೇಕೇ ಬೇಕು. ಇಲ್ಲದಿದ್ದರೆ ಕಷ್ಟ. ಕನಿಷ್ಟ ಓದಿನ ಹಸಿವಾದರೂ ಇರಲಿ. ಲವಲವಿಕೆ ಮೂಡಿಸಿಕೊಂಡು ಮನಸ್ಸಿನ ಬಾಗಿಲು ತೆರೆದಿಟ್ಟುಕೊಳ್ಳಿ. ಸಣ್ಣ ವಯಸ್ಸಿನಲ್ಲೇ ಜಡತ್ವ ಮೂಡಿಸಿಕೊಂಡರೆ ಖಂಡಿತಾ ಭವಿಷ್ಯ ಇಲ್ಲ..'- ಹೀಗೆಂದು ಎಚ್ಚರಿಸಿದರು ಸಾಹಿತಿ ವೈದೇಹಿ.
ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ 'ವಿದ್ಯಾರ್ಥಿ ಸಿರಿ'ಯಲ್ಲಿ ಆಶಯ ಭಾಷಣ ಮಾಡಿದ ವೆದೇಹಿ, 'ಬೋರ್' ಎನ್ನುವ ಶಬ್ದ ಮಕ್ಕಳಲ್ಲಿ ಬರಲೇಬಾರದು. ಹಾಗೇನಾದರೂ ಬಂದರೆ ಅದು ಅಪಾಯದ ಸಂಕೇತ ಎಂದರು.
ತಾರುಣ್ಯದಲ್ಲಿ ಯಾವ ಕಾರಣಕ್ಕೂ ಡಿಪ್ರೆಸ್ ಆಗಬೇಡಿ. ಲವಲವಿಕೆಯೇ ನಿಮ್ಮ ಮಂತ್ರವಾಗಲಿ. ಈ ಗಲಾಟೆ ಜಗತ್ತಿನಲ್ಲಿ ಹೇಗೆ ನಿರ್ವಹಿಸಬಲ್ಲೆವು ಎಂಬ ಆತಂಕ ಸಹಜ. ಆದರೆ ಸೂಕ್ಷ್ಮತೆ ಇದ್ದರೆ ಖಂಡಿಂತಾ ಯಶಸ್ಸು ಸಾಧ್ಯ. ಅದನ್ನು ಕಳೆದುಕೊಂಡರೆ ಭವಿಷ್ಯ ಕರಾಳವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ನಮ್ಮನ್ನು ಹಾರಿಸಿಕೊಂಡು ಹೋಗ್ತಿದೆ. ಆದರೆ ಇಂಗ್ಲೀಷೆ ಸರ್ವಸ್ವ ಎಂಬ ಭ್ರಮೆ ಬೇಡ. ನಮ್ಮ ಗಾಳಿಯನ್ನು ನಾವು ಉಸಿರಾಡದಿದ್ರೆ ಹೇಗೆ? ನಮ್ಮ ಭಾಷೆಯನ್ನು ನಾವು ಬಳಸದಿದ್ದರೆ ಹೇಗೆ ಎಂಬ ಎಚ್ಚರ ಇದ್ದರೆ ಸಾಕು ಎಂದು ಹೇಳಿದ ವೆದೇಹಿ, ಒಳ್ಳೆ ಅಭಿರುಚಿ ಬೆಳೆಸಿಕೊಳ್ಳಿ. ಇಲ್ಲದಿದ್ದರೆ ಎಲ್ಲದರಲ್ಲೂ ಊನ ಹುಡುಕುವ ಕೆಲಸ ಆಗುತ್ತದೆ ಎಂದರು.


